ಕೊಪ್ಪಳ ಸೆಪ್ಟೆಂಬರ್ 16: ಪರವಾನಿಗೆ ಭೂಮಾಪಕರಾದ ಬಸವರಾಜ ಪಾಟೀಲ ಅವರು ಕೊಪ್ಪಳದ ತಹಶೀಲ್ ಕಚೇರಿಯ ಮುಂದೆ ಲಂಚದ ಹಣ 5,000 ರೂ. ಪಡೆದುಕೊಂಡು ಟ್ರ್ಯಾಪಗೆ ಒಳಪಟ್ಟಿದ್ದು, ಆಪಾದಿತ ಅಧಿಕಾರಿಯಿಂದ ಲಂಚದ ಹಣ ಜಪ್ತು ಮಾಡಿಕೊಂಡು, ಆಪಾದಿತ ಅಧಿಕಾರಿಯನ್ನು ದಸ್ತಗಿರಿ ಮಾಡಿ ತನಿಖೆಯನ್ನು ಮುಂದುವರಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ ರಾಯಚೂರು ಇವರು ತಿಳಿಸಿದ್ದಾರೆ.

ಸಲೀಂಪಾಷಾ, ಪೊಲೀಸ್ ಉಪಾಧೀಕ್ಷಕರು, ಲೋಕಾಯುಕ್ತ ಕೊಪ್ಪಳ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಗಿರೀಶ ರೋಡ್ಕರ್ ಪಿ.ಐ, ಚಂದ್ರಪ್ಪ ಈಟಿ ಪಿ.ಐ, ರಾಜೇಶ ಬಟಗುರ್ಕಿ ಪಿ.ಐ, ರಾಮಣ್ಣ ಸಿಹೆಚ್‌ಸಿ, ಬಸವರಾಜ ಸಿಹೆಚ್‌ಸಿ, ಚನ್ನವೀರ ಸಿಹೆಚ್‌ಸಿ, ಗಣೇಶಗೌಡ ಸಿಪಿಸಿ, ನಾಗಪ್ಪ ಸಿಪಿಸಿ, ಮಂಜುನಾಥ ಸಿಪಿಸಿ, ಗವಿಕುಮಾರ ಸಿಪಿಸಿ, ಆನಂದ ಎಪಿಸಿ, ಪೀರಸಾಬ ಎಪಿಸಿ, ವಿರುಪಾಕ್ಷಪ್ಪ ಎಪಿಸಿ ಅವರು ಭಾಗವಹಿಸಿದ್ದರು.

ಘಟನೆ ಏನು: ನಾಗಪ್ಪ ತಂದೆ ಸಣ್ಣಯಮನಪ್ಪ ಕುದರಿಮೋತಿ ಸಾ:ಇರಕಲಗಡ ಇವರ ತಂದೆಯವರು ಇರಕಲಗಡ ಸೀಮಾದ ತಮಗೆ ಸಂಬಂಧಿಸಿದ ಜಮೀನಿನ ತತ್ಕಾಲ ಪೋಡಿಗಾಗಿ ಅರ್ಜಿ ಸಲ್ಲಿಸಿದ್ದರು. ಈ ವಿಷಯವಾಗಿ ನಾಗಪ್ಪ ಅವರು ಪರವಾನಿಗೆ ಭೂಮಾಪಕರಾದ ಬಸವರಾಜ ಪಾಟೀಲ್ ಇವರಿಗೆ ಸೆ.13ರಂದು ಭೇಟಿ ಮಾಡಿ ತಮ್ಮ ಅರ್ಜಿಯ ಬಗ್ಗೆ ವಿಚಾರಿಸಿದಾಗ ಬಸವರಾಜ ಪಾಟೀಲ್, ಪರವಾನಿಗೆ ಭೂಮಾಪಕರು ಈ ಕೆಲಸ ಮಾಡಿಕೊಡಲು 5,000 ರೂ ಲಂಚದ ಹಣಕ್ಕೆ ಒತ್ತಾಯಿಸಿದ್ದರು ಎಂದು ಕೊಪ್ಪಳ ಲೋಕಾಯುಕ್ತ ಠಾಣೆ ಗುನ್ನೆ ನಂ: 08/2023 ಕಲಂ: 7(ಚಿ) ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988 (ತಿದ್ದುಪಡಿ ಕಾಯ್ದೆ 2018) ರೀತ್ಯ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ರಾಯಚೂರು ಇವರ ಕಚೇರಿಯ ಪ್ರಕಟಣೆ ತಿಳಿಸಿದೆ.

error: Content is protected !!