
ಗಂಗಾವತಿ: ಕೆಆರ್ಪಿಪಿ ಪಕ್ಷದ ಸಂಸ್ಥಾಪಕ ಗಾಲಿ ಜನಾರ್ದನ ರೆಡ್ಡಿ ಅವರು ಗಂಗಾವತಿ ಕ್ಷೇತ್ರದಿಂದ ಸ್ಪರ್ಧೆ ಮಾಡುವುದನ್ನು ಖಚಿತಪಡಿಸಿ, ಗೆಲ್ಲಲು ವಿಭಿನ್ನ ರಣತಂತ್ರಗಳನ್ನು ಹೂಡುತ್ತಿದ್ದಾರೆ. ರೆಡ್ಡಿ ತಂತ್ರಗಳಿಗೆ ಸೆಡ್ಡು ಹೊಡೆಯಲು ಬಿಜೆಪಿ ಕ್ಷೇತ್ರದಲ್ಲಿ ಸಾಲು-ಸಾಲು ಕಾರ್ಯಕ್ರಮ ಆಯೋಜಿಸುತ್ತಿದೆ.
ಬಿಜೆಪಿಯು ನಗರದಲ್ಲಿ ಮಾ.13ರಂದು ವಿಜಯ ಸಂಕಲ್ಪ ಯಾತ್ರೆ, 14 ರಂದು ಅಂಜನಾದ್ರಿ ಅಭಿವೃದ್ಧಿ ಕಾಮಗಾರಿ ಭೂಮಿ ಪೂಜೆ ಕಾರ್ಯಕ್ರಮ, ಫಲಾನುಭವಿಗಳ ಸಮಾವೇಶ, ಮಾ.17 ರಂದು ಜಿಲ್ಲಾ ಯುವ ಮೋರ್ಚಾ ಸಮಾವೇಶ ಆಯೋಜಿಸಿದೆ.
ಕ್ರೀಡಾಂಗಣದಲ್ಲಿ ಅದ್ದೂರಿ ಕಾರ್ಯ ಕ್ರಮ: ಮಾ.14ರಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅಂಜನಾದ್ರಿ ಅಭಿವೃದ್ಧಿ ಕಾಮಗಾರಿಗೆ ಭೂಮಿ ಮಾಡಿ, ಕನಕಗಿರಿ ರಸ್ತೆಯಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ಫಲಾನುಭವಿಗಳ ಸಮಾವೇಶ ನಡೆಸಲಿದ್ದಾರೆ. ಅದಕ್ಕಾಗಿ ಬೃಹತ್ ವೇದಿಕೆ ನಿರ್ಮಿಸ ಲಾಗುತ್ತಿದೆ. 20 ಸಾವಿರಕ್ಕೂ ಹೆಚ್ಚು ಜನರಿಗೆ ಆಸನದ ವ್ಯವಸ್ಥೆ ಮಾಡಲಾಗುತ್ತಿದೆ.
ನಾಯಕರುಗಳ ಭಾಗಿ: ವಿಜಯ ಸಂಕಲ್ಪ ಯಾತ್ರೆಯಲ್ಲಿ ಶಾಸಕ ಜಗದೀಶ ಶೆಟ್ಟರ್, ಕೇಂದ್ರ ಸಚಿವ ಭಗವಂತ ಖೂಬಾ, ಸಚಿವ ಬಿ.ಶ್ರೀರಾಮುಲು ಭಾಗವಹಿಸುವರು. ಅಂಜನಾದ್ರಿಯಲ್ಲಿಯ ₹120 ಕೋಟಿ ವೆಚ್ಚದ ಕಾಮಗಾರಿಗಳ ಭೂಮಿ ಪೂಜೆಗೆ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಯುವ ಮೋರ್ಚಾ ಸಮಾವೇಶದಲ್ಲಿ ವಿಜಯೇಂದ್ರ ಭಾಗವಹಿಸುವರು.