* ಚಿಕ್ಕಮ್ಯಾಗೇರಿಯಲ್ಲಿ ಸ್ವಚ್ಛ ಶುಕ್ರವಾರ ಕಾರ್ಯಕ್ರಮ
* ಶುಚಿತ್ವದ ಬಗ್ಗೆ ಪಾಠ ಮಾಡಿದ ಸಿಇಓ
* ಶಾಲೆ, ಅಂಗನವಾಡಿಗಳಿಗೆ ಭೇಟಿ
* ಬಾಲ ಮಕ್ಕಳು, ವಿದ್ಯಾರ್ಥಿಗಳೊಂದಿಗೆ ಸಂವಾದ


ಕೊಪ್ಪಳ: ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಿ.ಫೌಜಿಯಾ ತರನ್ನುಮ್ ಅವರು ಜನವರಿ 20ರಂದು ಗ್ರಾಮೀಣ ಭಾಗದಲ್ಲಿ ಪ್ರವಾಸ ಕೈಗೊಂಡರು.

ಪ್ರತಿ ಶುಕ್ರವಾರ ಒಂದೊಂದು ಹಳ್ಳಿಗಳಲ್ಲಿ ಸ್ವಚ್ಛತಾ ಕಾರ್ಯ ಹಮ್ಮಿಕೊಂಡು ಜಿಲ್ಲೆಯಲ್ಲಿರುವ ಎಲ್ಲ ಗ್ರಾಮಗಳ ಸ್ವಚ್ಛತೆ ಮಾಡುವ ಉದ್ದೇಶದ ಚಿಲುಮೆ ಅಭಿಯಾನಕ್ಕೆ ಚಾಲನೆ ನೀಡಲು ಸಿಇಓ ಅವರು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮಕ್ಕೆ ಭೇಟಿ ನೀಡಿದರು.

ಗ್ರಾಮದ ಸರ್ಕಾರಿ ಬಾಲಕಿಯರ ಶಾಲೆಯಲ್ಲಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತಿ ವತಿಯಿಂದ ಹಮ್ಮಿಕೊಂಡಿದ್ದ ಚಿಲುಮೆ-2 ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದಿನ ಮಕ್ಕಳೆ ಮುಂದಿನ ಪ್ರಜೆಗಳು. ಹೀಗಾಗಿ ಅವರೇ ಸ್ವಚ್ಛ ಭಾರತ ರಾಯಬಾರಿಗಳು. ಮಕ್ಕಳು ಸ್ವಚ್ಛತೆಯನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಭವಿಷ್ಯದಲ್ಲಿ ಎಲ್ಲವೂ ಚೆನ್ನಾಗಿರಲು ಸಾಧ್ಯ. ಗಾಂಧೀಜಿಯವರು ಕಂಡ ಸ್ವಚ್ಛ ಭಾರತ ಕನಸು ನನಸಾಗಲು ಸಾಧ್ಯ. ಈ ಕಾರ್ಯದಲ್ಲಿ ಗ್ರಾಮಸ್ಥರು, ಸಾರ್ವಜನಿಕರು, ಮಕ್ಕಳು, ಶಿಕ್ಷಕರ ಪಾತ್ರ ಮುಖ್ಯವಾಗಿದೆ. ಸರ್ಕಾರದ ಜತೆ ಎಲ್ಲರೂ ಕೈಜೋಡಿಸಿದಾಗ ಮಾತ್ರ ಈ ಅಭಿಯಾನ ಯಶಸ್ವಿಯಾಗುತ್ತದೆ ಎಂದು ತಿಳಿಸಿದರು.

ವಾರಕ್ಕೆ ಒಂದು ದಿನವಾದರೂ ಸಾರ್ವಜನಿಕ ಸ್ಥಳ, ದೇವಸ್ಥಾನ ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ಶ್ರಮದಾನ ಮಾಡುವುದನ್ನು ರೂಢಿಸಿಕೊಳ್ಳಬೇಕು. ಸ್ವಚ್ಛತೆಯ ಬಗ್ಗೆ  ಜಾಗೃತಿ ಮೂಡಿಸುವ ಕಾರ್ಯಕ್ಕೆ ಪ್ರತಿಯೊಂದು ಗ್ರಾಮಸ್ಥರಲ್ಲಿ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಸ್ವಚ್ಛವಾಹಿನಿಯು ಗ್ರಾಮದ ಪ್ರತಿಯೊಂದು ಹಳ್ಳಿಗೆ ಹೋಗಿ ಕಸ ಸಂಗ್ರಹಣೆ ಮಾಡಿ, ಹಸಿ-ಒಣ ಕಸವನ್ನು ಸರಿಯಾಗಿ ನಿರ್ವಹಣೆ ಮಾಡುವಂತಾಗಬೇಕು ಎಂದು ಸಿಇಓ ಅವರು ಸೂಚನೆ ನೀಡಿದರು.

*ವಿದ್ಯಾರ್ಥಿಗಳೊಂದಿಗೆ ಸಂವಾದ:* ಗ್ರಾಮ ಭೇಟಿ ವೇಳೆ ಸಿಇಓ ಅವರು ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದರು. ವಿದ್ಯಾರ್ಥಿನಿಯರು ವೈಯಕ್ತಿಕ ಸ್ವಚ್ಛತೆ ಜೊತೆಗೆ ತಾವು ಬಳಸುವ ವಸ್ತುಗಳನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು ಎಂದು ತಿಳಿಸಿದರು. ಹಸಿ ಕಸ ಹಾಗೂ ಒಣ ಕಸವನ್ನು ಬೇರ್ಪಡಿಸುವುದು ಹಾಗೂ ಅದರಿಂದ ಗೊಬ್ಬರ ತಯಾರಿಸುವುದು ಹಾಗೂ ಸರಿಯಾಗಿ ಅಧ್ಯಯನ ಮಾಡುವಂತೆ ಅವರಿಗೆ ಸಲಹೆ ಮಾಡಿದರು.

*ಅಂಗನವಾಡಿಗೆ ಭೇಟಿ:*
ಬಳಿಕ ಸಿಇಓ ಅವರು, ಗ್ರಾಮದ 1 ಮತ್ತು 5 ನೇ ಅಂಗನವಾಡಿ ಕೇಂದ್ರಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಬಾಲ ಮಕ್ಕಳೊಂದಿಗೆ ಆಪ್ತವಾಗಿ ಮಾತನಾಡಿ ಮಕ್ಕಳ ಕಲಿಕಾ ಗುಣಮಟ್ಟವನ್ನು ಪರೀಕ್ಷಿಸಿದರು.

ಕೆಲವು ಮಕ್ಕಳೊಂದಿಗೆ ಹಾಡು ಹಾಗೂ ಮಗ್ಗಿಗಳನ್ನು ಹೇಳಿಸಿ ಖುಷಿಪಟ್ಟರು.

*ಅಡುಗೆ ಕೊಠಡಿಗೆ ಮೆಚ್ಚುಗೆ*
ನರೇಗಾ ಯೋಜನೆಯಡಿ ನಿರ್ಮಾಣಗೊಂಡಿರುವ ಚಿಕ್ಕಮ್ಯಾಗೇರಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಅಡುಗೆ ಕೊಠಡಿ, ಶಾಲಾ ತಡೆಗೋಡೆ ಕಾಮಗಾರಿ ಸ್ಥಳಕ್ಕೆ ಸಹ ಸಿಇಓ ಅವರು ಭೇಟಿ ನೀಡಿ ಪರಿಶೀಲಿಸಿದರು. ಸ್ಥಳದಲ್ಲಿದ್ದ ಅಡುಗೆ ತಯಾರಿಸುವವರು ಹಾಗೂ ಸಾರ್ವಜನಿಕರಿಂದ ಅಭಿಪ್ರಾಯ ಪಡೆದು ಕಾಮಗಾರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಈ ರೀತಿಯ ಗುಣಮಟ್ಟದ ಶಾಲಾಭಿವೃದ್ಧಿ ಕಾಮಗಾರಿಗಳು ಆಗಬೇಕೆಂದು ಸಲಹೆ ನೀಡಿದರು.

*ವಿದ್ಯಾರ್ಥಿಗಳ ಜತೆ ಬಿಸಿಯೂಟ ಸವಿದರು:*
ಗ್ರಾಮೀಣ ಪ್ರವಾಸ ವೇಳೆ ಸಿಇಓ ಅವರು, ಗ್ರಾಮದ ಶ್ರೀಮತಿ ನೀಲಮ್ಮ ಶಿವಶಂಕರರಾವ್ ದೇಸಾಯಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳ ಸಾಲಿನಲ್ಲಿ ಕುಳಿತು ಬಿಸಿ ಊಟ ಸವಿದರು. ಹತ್ತಿರದ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಸಂವಿಧಾನದ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಕೇಳಿ, ಅಭ್ಯಾಸ ಮಾಡಲುಸಲಹೆ ನೀಡಿದರು.

ಈ ವೇಳೆ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಂತೋಷ ಪಾಟೀಲ್ ಬಿರಾದಾರ್, ಸಹಾಯಕ ನಿರ್ದೇಶಕರಾದ ಕುಮಾರಿ ಗೀತಾ ಅಯ್ಯಪ್ಪ, ಫಕ್ಕಿರಪ್ಪ ಕಟ್ಟಿಮನಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಸಿಂಧು ಅಂಗಡಿ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಕೆಂಚಮ್ಮ ರಾಮಣ್ಣ ಹಿರೇಮನಿ, ಉಪಾಧ್ಯಕ್ಷರಾದ ಶರಣಪ್ಪ ಕುರಿ, ಸದಸ್ಯರಾದ ಉತ್ತಮ ದ್ಯಾಮಣ್ಣ, ಶರಣಕುಮಾರ ಅಮರಗಟ್ಟಿ, ಶರಣಪ್ಪ ಹಾದಿಮನಿ, ಶರಣಪ್ಪ ಕರಡದ, ಉಮೇಶ ವಡ್ಡರ, ಶರಣಯ್ಯ ಬಂಡಿಹಾಳ, ಗ್ರಾ. ಪಂ ಪಿಡಿಓ ವೆಂಕಟೇಶ ನಾಯಕ, ಜಿ.ಪಂ ಎಸ್ಬಿಎಂ ಸಂಯೋಜಕರಾದ ಮಾರುತಿ, ಟಿಸಿ ಯಮನೂರ, ಐಇಸಿ ಶರಣಪ್ಪ ಹಾಳಕೇರಿ, ಶಾಲಾ ಶಿಕ್ಷಕರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಎನ್‌ಆರ್‌ಎಲ್‌ಎಂ ಸಿಬ್ಬಂದಿ, ಆರೋಗ್ಯ ಕೇಂದ್ರದ ಸಿಬ್ಬಂದಿ, ಗ್ರಾಮಸ್ಥರು ಹಾಜರಿದ್ದರು.

error: Content is protected !!