ಒಂದೆಡೆ ಗ್ಯಾರಂಟಿ ಯೋಜನೆಗಳ ಮೂಲಕ ಬಡವರ ನೆರವಿಗೆ ಧಾವಿಸಿದೆ ಎನ್ನುತ್ತಿರುವ ರಾಜ್ಯ ಸರ್ಕಾರ ಮತ್ತೊಂದೆಡೆ ಆರೋಗ್ಯದ ವಿಚಾರದಲ್ಲಿ ಅದೇ ಬಡವರನ್ನು ಸಂಕಷ್ಟಕ್ಕೆ ದೂಡುತ್ತಿದೆಯೇ? ಇಂಥದ್ದೊಂದು ಅನುಮಾನ ಇದೀಗ ಸೃಷ್ಟಿಯಾಗಿದೆ. ಇದಕ್ಕೆ ಬಲವಾದ ಕಾರಣವೂ ಇದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಅನೇಕ ಅಗತ್ಯ ಔಷಧಗಳ ತೀವ್ರ ಕೊರತೆ ಇದ್ದು, ಬಡವರು ಖಾಸಗಿ ಆಸ್ಪತ್ರೆ ಹಾಗೂ ಮೆಡಿಕಲ್ಗಳನ್ನು ಅವಲಂಬಿಸಬೇಕಾಗಿ ಬಂದಿದೆ.
ನವೆಂಬರ್ 18: ಕರ್ನಾಟಕ ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ 250ಕ್ಕೂ ಹೆಚ್ಚು ಔಷಧಗಳು ದಾಸ್ತಾನಿಲ್ಲದಿರುವ ವಿಚಾರ ಬೆಳಕಿಗೆ ಬಂದಿದೆ. ಹೀಗಾಗಿ, ಬಡ ರೋಗಿಗಳು ಸರ್ಕಾರಿ ಆಸ್ಪತ್ರೆಗಳಿಗೆ ಹೋದರೆ ಔಷಧ ಸಿಗುವ ಗ್ಯಾರಂಟಿಯೇ ಇಲ್ಲವಾಗಿದೆ. ಒಂದೆಡೆ, ಆಗಾಗ್ಗೆ ಬದಲಾಗುವ ವಾತಾವರಣದಿಂದಾಗಿ ರಾಜ್ಯದಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಹೆಚ್ಚಾಗಿದೆ. ಇಂಥ ಪರಿಸ್ಥಿತಿಯಲ್ಲಿಯೇ ಔಷಧ ದಾಸ್ತಾನು ಕೊರತೆ ಉಂಟಾಗಿರುವುದು ಸಮಸ್ಯೆಗೆ ಕಾರಣವಾಗಿದೆ.
ಸರ್ಕಾರಿ ಔಷಧ ದಾಸ್ತಾನು ಕೇಂದ್ರಗಳಲ್ಲಿ ಔಷಧಗಳು ಖಾಲಿಯಾಗಿವೆ. ಮತ್ತೊಂದೆಡೆ, ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದಲ್ಲಿ 250 ಔಷಧಗಳ ದಾಸ್ತಾನು ಸಂಪೂರ್ಣ ಖಾಲಿ ಆಗಿದೆ.
ಔಷಧ ಕೊರತೆಗೆ ಕಾರಣವೇನು?
ಟೆಂಡರ್ ಪ್ರಕ್ರಿಯೆ ವಿಳಂಬವಾಗಿರುವುದೇ ಔಷಧ ಕೊರತೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಇದೇ ಕಾರಣದಿಂದ ಜೀವರಕ್ಷಕ ಔಷಧಗಳ ಪೂರೈಕೆಯೂ ಸ್ಥಗಿತವಾಗಿದೆ. ಹೀಗಾಗಿ ಬಡ ರೋಗಿಗಳು ದುಬಾರಿ ಬೆಲೆ ಕೊಟ್ಟು ಖಾಸಗಿ ಆಸ್ಪತ್ರೆ ಹಾಗೂ ಮೆಡಿಕಲ್ಗೆ ತೆರಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಯಾವೆಲ್ಲ ಔಷಧಗಳು ಔಟ್ ಆಫ್ ಸ್ಟಾಕ್?
ಔಷಧ ಪೂರೈಕೆಗೆ ಪ್ರತಿ ವರ್ಷ ಕೆಎಸ್ಎಂಸಿಎಲ್ (ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ) ಕೋಟ್ಯಂತರ ರೂ. ಖರ್ಚು ಮಾಡುತ್ತದೆ. ಆದಾಗ್ಯೂ ಈ ವರ್ಷ ಔಷಧ ಕೊರತೆ ಎದುರಾಗಿದೆ. ಶ್ವಾಸಕೋಶ, ಕರುಳು, ರಕ್ತಹೀನತೆ, ನ್ಯಮೋನಿಯಾ, ಅಸ್ತಮಾ, ಮಧುಮೇಹ, ಬಿಪಿ, ಹೃದಯಾಘಾತ, ಕಣ್ಣಿನ ಸೋಂಕು ಸೇರಿದಂತೆ ಹಲವು ಗಂಭೀರ ಖಾಯಿಲೆಗಳಿಗೆ ನೀಡುವ ಔಷಧಗಳೇ ಸದ್ಯಕ್ಕೆ ಔಟ್ ಆಫ್ ಸ್ಟಾಕ್ ಆಗಿವೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ಯಾರಸಿಟಮಲ್, ಅಲ್ಬುಮಿನಿ, ಆಯಂಪ್ಸಿಲಿನ್, ಲೆವೊಥೈರಾಕ್ಸಿನ್, ವಿಲ್ಡಗ್ಲೀಪ್ಟನ್, ಪ್ಯಾರಸಿಟಾ, ನ್ಯುಸ್ಟೊಜಿಮೈನ್, ಸಬ್ಲೋಟೊಮಲ್, ಅಸ್ಟೊಪೈನ್ ಸೇರಿದಂತೆ ವಿವಿಧ ಮಾತ್ರೆಗಳ ಕೊರತೆ ಇದೆ.