– ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರಿಂದ ಹೋರಾಟ

– ನಿರ್ವಹಣೆ ಕಾರ್ಮಿಕರಿಗೆ ವೇತನ ನೀಡಲು ಒತ್ತಾಯ

ಕನಕಗಿರಿ: ಕೆರೆ ತುಂಬಿಸುವ ಯೋಜನೆ ವ್ಯಾಪ್ತಿಯ ತಾಲೂಕಿನ ಎಲ್ಲ ಕೆರೆ ತುಂಬಿಸುವ ಜೊತೆಗೆ ಪಂಪ್ ಹೌಸ್ ನಿರ್ವಹಣೆಗೆ ಟೆಂಡರ್ ಪ್ರಕ್ರಿಯೆ ಆರಂಭಿಸಬೇಕು ಎಂದು ಆಗ್ರಹಿಸಿ, ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು, ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಸೋಮವಾರ ಪ್ರತಿಭಟಿಸಿದರು.

ಅಯ್ಯಪ್ಪ ಸ್ವಾಮಿ ದೇವಸ್ಥಾನದಿಂದ ವಾಲ್ಮೀಕಿ ವೃತ್ತದ ವರೆಗೆ ಮೆರವಣಿಗೆ ನಡೆಸಿದ, ಪ್ರತಿಭಟನಾಕಾರರು ರಾಜ್ಯ ಸರಕಾರ ಮತ್ತು ಸಚಿವ ಶಿವರಾಜ್ ತಂಗಡಗಿ ವಿರುದ್ಧ ಘೋಷಣೆ ಕೂಗಿದರು. ವೃತ್ತದಲ್ಲಿ ಸುಮಾರು 1 ಗಂಟೆ ಕಾಲ ಬಹಿರಂಗ ಸಭೆ ನಡೆಸಿದ ಹೋರಾಟಗಾರರು ಎಲ್ಲ ಕೆರೆಗೆ ನೀರು ತುಂಬಿಸದಿದ್ದರೆ ರೈತರೊಂದಿಗೆ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕನಕಗಿರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಈ ಮೊದಲು ಮಾತನಾಡಿದ ಸಂಘಟನೆ ರಾಜ್ಯಾಧ್ಯಕ್ಷ ಶರಣಪ್ಪ ದೊಡ್ಡಮನಿ, ರಾಜ್ಯಕ್ಕೆ ಮಾದರಿ ಆಗುವಂತೆ ಕನಕಗಿರಿ ವಿಧಾನಸಭೆ ಕ್ಷೇತ್ರದಲ್ಲಿ ಕೆರೆ ತುಂಬಿಸುವ ಯೋಜನೆ ಜಾರಿ ಆಗಿದೆ. ಈ ವಿಷಯದಲ್ಲಿ ಆಗಿನ ಸಣ್ಣ ನೀರಾವರಿ ಸಚಿವರೂ ಆಗಿದ್ದ , ಸಚಿವ ಶಿವರಾಜ ತಂಗಡಗಿ ಪಾತ್ರ ಸ್ಮರಣೀಯ. ಆದರೆ, ಮೂರನೇ ಬಾರಿಗೆ ಅಧಿಕಾರ ಸಿಕ್ಕಿದ್ದರಿಂದ ಕ್ಷೇತ್ರದ ಜನರ ಬಗ್ಗೆ ತಂಗಡಗಿ ತಾತ್ಸಾರ ಭವದಿಂದ‌ ನೋಡುತ್ತಿದ್ದಾರೆ. ಇದಕ್ಕೆ ಅವರು ತಕ್ಕೆ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕೆರೆ ತುಂಬುವ ಯೋಜನೆ ಸಮರ್ಪಕವಾಗಿ ಜಾರಿಯಾದರೆ ಕನಕಗಿರಿ ತಾಲೂಕಿನ ಹತ್ತಾರು ಗ್ರಾಮಗಳ ಸಾವಿರಾರು ರೈತರ ಬಾಳು ಬಂಗಾರವಾಗಲಿದೆ. ಆದರೆ, ಸದ್ಯ ಕೆರೆ ತುಂಬುವ ಯೋಜನೆ ಬಹುತೇಕೆ ಹಳ್ಳ ಹಿಡಿದಿದೆ. ನೆಪಕ್ಕೆ ಎನ್ನುವಂತೆ ಒಂದಷ್ಟು ದಿನ ಕನಕಗಿರಿಯ ಲಕ್ಷ್ಮೀದೇವಿ ಕೆರೆ ಹಾಗೂ ಕಾಟಾಪೂರ ಕೆರೆಗೆ ಮಾತ್ರ ನೀರು ಬರುತ್ತವೆ. ಆದರೆ, ಮುಂದಿನ ಯಾವ ಕೆರೆಗೂ ನೀರು ಬರುತ್ತಿಲ್ಲ. ಇದನ್ನು ನಾವು ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಭಾಗೀಯ ಅಧ್ಯಕ್ಷ ಪಂಪಣ್ಣ ನಾಯಕ ಮಾತನಾಡಿ, ಕನಕಗಿರಿ ತಾಲೂಕಿನ ಎಲ್ಲ ಕೆರೆಗೆ ನೀರು ತುಂಬಿಸುತ್ತಿದ್ದೇವೆ ಎಂದು ಸಚಿವ ಶಿವರಾಜ ತಂಗಡಗಿ ಸುಳ್ಳು ಹೇಳುತ್ತಿದ್ದಾರೆ. ರೈತರು ಇದನ್ನು ಸಹಿಸುವುದಿಲ್ಲ. ವಾಸ್ತವದಲ್ಲಿ ಕೆರೆ ತುಂಬುವ ಯೋಜನೆ ವ್ಯಾಪ್ತಿಯ ಯಾವೊಂದು ಕೆರೆಗೆ ನೀರು ಬರುತ್ತಿಲ್ಲ. ಇದನ್ನು ಕ್ಷೇತ್ರ ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂಬುದನ್ನು ಸಚಿವ ಶಿವರಾಜ ತಂಗಡಗಿ ಅವರು ಅರಿಯಬೇಕು. ಕೂಡಲೇ ಕೆರೆ ತುಂಬಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಮುಂದಿನ 15 ದಿನದಲ್ಲಿ ಎಲ್ಲ ಕೆರೆಗೆ ನೀರು ಬರುವಂತೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಹಂತ ಹಂತವಾಗಿ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ದಲಿತ ಸಂಘಟನೆ ಹಿರಿಯ ಮುಖಂಡ ಹುಲಿಹೈದರ ಕನಕಾಚಲ ನಾಯಕ, ರೈತ ಮುಖಂಡರಾದ ರಾಮಣ್ಣ ಜಾಡಿ, ಮಲ್ಲಿಕಾರ್ಜುನ ರೆಡ್ಡಿ, ಎಸ್.ದೊಡ್ಡನಗೌಡ, ಕಾರ್ಯಕರ್ತರಾದ ಆಂಜನೇಯ, ನಾಗರಾಜ, ದುರಗಪ್ಪ, ಈಶಪ್ಪ, ಮಹೇಶ, ಶರಣಬಸವ ಸೇರಿ ಇತರರು ಇದ್ದರು.

ಬಾಕ್ಸ್:

ಕಾರ್ಮಿಕರಿಗೆ ವೇತನ ನೀಡಲು ಕ್ರಮವಹಿಸಿ!

ಕೆರೆ ತುಂಬಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು. ಕೆರೆ ನಿರ್ವಹಣೆಗೆ ಟೆಂಡರ್ ಕರೆದು, ಪಂಪ್ ಹೌಸ್ ಮತ್ತು ಪೈಪ್ ಲೈನ್ ನಿರ್ವಹಣೆ ಕಾರ್ಮಿಕರಿಗೆ ವೇತನ ಪಾವತಿ ಮಾಡಬೇಕು. ಕನಕಗಿರಿ ತಾಲೂಕಿಗೆ ಜೆಸ್ಕಾಂ ಎಇಇ ಕಚೇರಿ, ಕೃಷಿ ಮತ್ತು ತೋಟಗಾರಿಕೆ ಇಲಾಖೆ, ಅಗ್ನಿಶಾಮಕ ಠಾಣೆ,‌ ಬಸ್ ಘಟಕ, ಉಪ‌ ನೋಂದಣಾಧಿಕಾರಿ ಕಚೇರಿ ಆರಂಭಕ್ಕೆ ಕ್ರಮ ಕೈಗೊಳ್ಳಬೇಕು. ರೈತ ಭವನ ಮತ್ತು ಪತ್ರಿಕಾ ಭವನ ನಿರ್ಮಿಸಬೇಕು. ಮಳೆಗೆ ಕೃಷಿ ‌ಮತ್ತು ತೋಟಗಾರಿಕೆ ಬೆಳೆ ಹಾನಿಗೆ ಒಳಗಾಗಿದ್ದು, ಕೂಡಲೇ ಕಂದಾಯ ಇಲಾಖೆಯಿಂದ ಸರ್ವೆ ಮಾಡಿಸಿ, ಪರಿಹಾರ ನೀಡಬೇಕು ಎಂದು ಹಕ್ಕೋತ್ತಾಯ ಮಂಡಿಸಿದರು.

ಕೋಟ್:

ಕನಕಗಿರಿ ತಾಲೂಕಿನಲ್ಲಿ ಇಸ್ಪೀಟ್, ಮಟ್ಕಾ ಸೇರಿ ಅಕ್ರಮ ಚಟುವಟಿಕೆ ಹೆಚ್ಚಾಗಿದೆ. ಇದಕ್ಕೆ ಮುಗ್ದ ರೈತರು ಮತ್ತು ಅವರ ಮಕ್ಕಳು ಬಲಿ ಆಗುತ್ತಿದ್ದಾರೆ. ಅಕ್ರಮ ಚಟುವಟಿಕೆಗೆ ಪೊಲೀಸ್ ಇಲಾಖೆಯಲ್ಲೇ ಕೆಲವರು ಸಾತ್ ನೀಡುತ್ತಿದ್ದಾರೆ ಎಂಬ ಆರೋಪಗಳಿವೆ. ಈ ಬಗ್ಗೆ ತನಿಖೆ ನಡೆಯಬೇಕು.ಪೊಲೀಸ್ ಇಲಾಖೆ ಇಸ್ಪೀಟ್, ಮಟ್ಕಾದಂತಹ ಅಕ್ರಮ ಚಟುಬಟಿಕೆ ತಡೆಯಬೇಕು.

ಹುಲಿಹೈದರ ಕನಕಾಚಲ ನಾಯಕ,‌ ದಲಿತ ಮುಖಂಡ

ಕೆರೆ ತುಂಬಿಸುವ ಯೋಜನೆಯಡಿ ಕನಕಗಿರಿ ತಾಲೂಕಿನ ಎಲ್ಲ ಕೆರೆ ತುಂಬಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ,  ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು, ಕನಕಗಿರಿ ವಾಲ್ಮೀಕಿ ವೃತ್ತದಲ್ಲಿ ಸೋಮವಾರ ಪ್ರತಿಭಟಿಸಿದರು.

error: Content is protected !!