ನಂಜನಗೂಡು :ದಕ್ಷಿಣ ಕಾಶಿ ನಂಜನಗೂಡು ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದಲ್ಲಿ ಹುಂಡಿ ಎಣಿಕೆ ನಡೆದಿದ್ದು ದಾಖಲೆಯ 2.40 ಕೋಟಿ ರೂಪಾಯಿ ನಂಜುಂಡನಿಗೆ ಕಾಣಿಕೆಯಾಗಿ ಬಂದಿದೆ.
ದೇವಾಲಯದ ದಾಸೋಹ ಭವನದಲ್ಲಿ ನಡೆದ 26 ಹುಂಡಿಗಳ ಎಣಿಕೆ ಕಾರ್ಯದಲ್ಲಿ 2.40.96.139 ರೂಪಾಯಿ ಸಂಗ್ರಹವಾಗಿದ್ದು, 194 ಗ್ರಾಂ 800 ಮಿಲಿ ಚಿನ್ನ, 5ಕೆಜಿ 50 ಗ್ರಾಂ ಬೆಳ್ಳಿ, 31 ವಿದೇಶಿ ಕರೆನ್ಸಿ, ಕಾಣಿಕೆಯಾಗಿ ಬಂದಿದೆ. ಶ್ರೀ ನಂಜುಂಡೇಶ್ವರ ಸ್ವಾಮಿ ಚಿಕ್ಕ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿದ ಪರಿಣಾಮ ಈ ಬಾರಿ ಎರಡು ಕೋಟಿಗೂ ಹೆಚ್ಚು ಆದಾಯ ದಾಟಿದೆ ಎನ್ನಲಾಗಿದೆ.
ಹುಂಡಿ ಎಣಿಕೆ ಕಾರ್ಯದಲ್ಲಿ ಸ್ವಸಹಾಯ ಸಂಘದ ಮಹಿಳೆಯರು ಹಾಗೂ ದೇವಾಲಯದ ಸಿಬ್ಬಂದಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಎ.ಸಿ. ಕಮಲಾಬಾಯಿ, ಮೈಸೂರು ತಹಶೀಲ್ದಾರ್ ಗ್ರೇಡ್ 2 ಪುಟ್ಟಸ್ವಾಮಿ ಗೌಡ, ಇಒ ಜಗದೀಶ್ ಕುಮಾರ್., ಎಇಒ ವೆಂಕಟೇಶ್ ಪ್ರಸಾದ್, ಖಾತೆ ಅಧೀಕ್ಷಕ ಗುರುಮಲ್ಲಯ್ಯ, ಬ್ಯಾಂಕ್ ಆಫ್ ಬರೋಡಾ ವ್ಯವಸ್ಥಾಪಕ ಟಿ.ಕೆ ನಾಯಕ್ ಹಾಜರಿದ್ದರು.