ಬಳ್ಳಾರಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ಶುಕ್ರವಾರ ಬಳ್ಳಾರಿಗೆ ಬರಲಿದ್ದು, ನಗರದ ಕಪ್ಪಗಲ್ ರಸ್ತೆಯ ಮೈದಾನದಲ್ಲಿ ನಡೆಯುವ ಬಹಿರಂಗ ಸಭೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಕೆಲವೆಡೆ ವಾಹನಗಳ ಸಂಚಾರ ಹಾಗೂ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಕಾರ್ಯಕ್ರಮಕ್ಕೆ ಬರುವ ಕಾರ್ಯಕರ್ತರಿಗೆ ಹಾಗೂ ಸಾರ್ವಜನಿಕರಿಗೆ ಸಂಚಾರಕ್ಕೆ ಅಡಚಣೆಯಾಗದಂತೆ ಕ್ರಮವಹಿಸಲಾಗಿದ್ದು, ಕಪ್ಪಗಲ್ ರಸ್ತೆಯಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಿ, ಅನ್ಯ ಮಾರ್ಗದ ಮೂಲಕ ಸಂಚರಿಸುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಂಜಿ‌ತ್‌ಕುಮಾರ್‌ ಬಂಡಾರು ತಿಳಿಸಿದ್ದಾರೆ.

ಶುಕ್ರವಾರ ಬೆಳಿಗ್ಗೆ 7ರಿಂದ ಸಂಜೆ 6 ಗಂಟೆ ವರೆಗೆ ಸಿರಿವಾರ, ಕಪ್ಪಗಲ್ ಗ್ರಾಮದಿಂದ ಬಳ್ಳಾರಿ ನಗರಕ್ಕೆ ಬರುವ ಮತ್ತು ಹೋಗುವ ಹಾಗೂ ಬಳ್ಳಾರಿ ನಗರದಿಂದ ಸಿರಿವಾರ, ಕಪ್ಪಗಲ್ ಗ್ರಾಮಕ್ಕೆ ಹೋಗುವ ಮತ್ತು ಬರುವ ಸಾರ್ವಜನಿಕರ ಎಲ್ಲಾ ವಾಹನಗಳಿಗೆ ಬಳ್ಳಾರಿ ನಗರದ ಕಪ್ಪಗಲ್ ರಸ್ತೆಯ ಮೂಲಕ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಬದಲಿ ಮಾರ್ಗವಾದ ಕೆ.ಇ.ಬಿ ಸರ್ಕಲ್, ಸಂಗನಕಲ್ ಬೈಪಾಸ್, ಸಿರಿವಾರ ಕ್ರಾಸ್ ಮುಖಾಂತರ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.

ಮ್ಯಾಕ್ಸ್ ಕ್ರಾಸ್‍ನಿಂದ ಕಪ್ಪಗಲ್ ರಸ್ತೆಯ ಬ್ರಹ್ಮಯ್ಯ ದೇವಸ್ಥಾನದ ಕಾಲುವೆಯವರೆಗೆ ರಸ್ತೆಯ ಎರಡು ಬದಿಗಳಲ್ಲಿ ಎಲ್ಲಾ ರೀತಿ ವಾಹನಗಳ ಪಾರ್ಕಿಂಗ್ ನಿಷೇಧಿಸಲಾಗಿದೆ.

ಭದ್ರತಾ ಹಿತದೃಷ್ಟಿಯಿಂದ ಕಾರ್ಯಕ್ರಮ ಪ್ರದೇಶದ ಸುತ್ತಲೂ 5 ಕಿ.ಮೀ. ವ್ಯಾಪ್ತಿಯ ಪ್ರದೇಶದಲ್ಲಿ ಪೆಟ್ರೋಲ್, ಡೀಸೆಲ್, ಗ್ಯಾಸ್ ಮತ್ತಿತರ ಸುಲಭವಾಗಿ ಹಾಗೂ ಕ್ಷಣಾರ್ಧದಲ್ಲಿ ದಹಿಸಬಲ್ಲ ‍ಪದಾರ್ಥಗಳನ್ನು ಸಾಗಣೆ ಮಾಡುವ ವಾಹನಗಳ ಸಂಚಾರ ಹಾಗೂ ನಿಲುಗಡೆ ನಿಷೇಧಿಸಲಾಗಿದೆ.

ಕಾರ್ಯಕ್ರಮ ನಡೆಯುವ ಪ್ರದೇಶದಲ್ಲಿ ಯಾವುದೇ ರೀತಿಯ ಡ್ರೋಣ್ ಹಾರಾಟ ಮಾಡದಂತೆ ರೆಡ್ ಜೋನ್ ಪ್ರದೇಶವನ್ನಾಗಿ ಘೋಷಿಸಿದ್ದು, ಆದೇಶ ಉಲ್ಲಂಘಿಸಿದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ರಂಜಿ‌ತ್‌ಕುಮಾರ್‌ ಬಂಡಾರು ತಿಳಿಸಿದ್ದಾರೆ.

error: Content is protected !!