ಬೆಂಗಳೂರು (ಮೇ.3): ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಭಜರಂಗದಳ ಮತ್ತು ದ್ವೇಷ ಬಿತ್ತು ಸಂಘಟನೆಗಳನ್ನು ಬ್ಯಾನ್ ಮಾಡುವ ಬಗ್ಗೆ ಹೇಳಿಕೊಂಡಿತ್ತು. ಇದಕ್ಕೆ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮಾತ್ರವಲ್ಲ ಭಜರಂಗ ದಳ ನಾಳೆ ಸಂಜೆ 7 ಗಂಟೆಗೆ ರಾಜ್ಯದಾದ್ಯಂತ ಸಾಮೂಹಿಕ ಹನುಮಾನ್ ಚಾಲಿಸಾ ಪಠಣವನ್ನು ಆಯೋಜಿಸಿದೆ.
ಇದು ಧರ್ಮಕ್ಕೆ ಸಂಕಟವಾಗಿರುವ ಸಮಯ. ಇದಕ್ಕೆ ಎಲ್ಲರೂ ಒಟ್ಟಾಗಿ ನಿಲ್ಲುವುದೊಂದೇ ಪರಿಹಾರ. ನಮ್ಮೆಲ್ಲ ಭೇದಗಳನ್ನು ಬದಿಗಿಟ್ಟು ಧರ್ಮರಕ್ಷಣೆಗೆ ಜೊತೆಯಾಗೋಣ, ಕೈ ಜೋಡಿಸೋಣ ಎಂದು ಕರೆ ಕೊಟ್ಟಿದೆ.
ಕಾಂಗ್ರೆಸ್ ಪ್ರಣಾಳಿಕೆಗೆ ಬೆಂಕಿಹಚ್ಚಿ ಆಕ್ರೋಶ: ರಾಜ್ಯ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಮಂಗಳವಾರ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಬಜರಂಗ ದಳವನ್ನು ನಿಷೇಧಿಸುವುದಾಗಿ ಹೇಳಿದ್ದು, ಕಾಂಗ್ರೆಸ್ನ ಈ ಪ್ರಸ್ತಾಪಕ್ಕೆ ಹಿಂದೂಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಕಾಂಗ್ರೆಸ್ನ್ನು ಸೋಲಿಸಲು ಇಂದಿನಿಂದಲೇ ಬೀದಿಗೆ ಇಳಿಯುವಂತೆ ವಿಶ್ವಹಿಂದು ಪರಿಷತ್ ಹಾಗೂ ಬಜರಂಗದಳಗಳು ತನ್ನ ಕಾರ್ಯಕರ್ತರಿಗೆ ಕರೆ ನೀಡಿವೆ.
ಈ ಮಧ್ಯೆ, ಉಡುಪಿಯ ರಾಷ್ಟ್ರೀಯ ಹೆದ್ದಾರಿ 169ಎ ಕಡಿಯಾಳಿಯಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದ ಭಜರಂಗ ಕಾರ್ಯಕರ್ತರು, ಕಾಂಗ್ರೆಸ್ನ ಪ್ರಣಾಳಿಕೆಯನ್ನು ಸುಟ್ಟು ಹಾಕಿದರು. ಈ ವೇಳೆ ಮಾತನಾಡಿದ ಭಜರಂಗದಳ ದಕ್ಷಿಣ ಪ್ರಾಂತ ಸಂಯೋಜಕ ಸುನೀಲ್ ಕೆ.ಆರ್., ತಾಕತ್ತಿದ್ದರೆ ಭಜರಂಗದಳವನ್ನು ನಿಷೇಧಿಸಲಿ, ಅದಕ್ಕೆ ತಕ್ಕ ಉತ್ತರ ನೀಡಲು ಸಿದ್ಧರಿದ್ದೇವೆ. ತಕ್ಷಣ ತಮ್ಮ ಪ್ರಣಾಳಿಕೆಯನ್ನು ಕಾಂಗ್ರೆಸ್ ಹಿಂದಕ್ಕೆ ಪಡೆಯಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಇದೇ ವೇಳೆ, ಮಂಗಳೂರಿನಲ್ಲಿ ಮಾತನಾಡಿದ ವಿಹಿಂಪ ಪ್ರಾಂತ ಕಾರ್ಯದರ್ಶಿ ಶರಣ್ ಪಂಪ್ವೆಲ್, ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ನ್ನು ಸೋಲಿಸಲು ಈಗಿನಿಂದಲೇ ನೇರವಾಗಿ ಚುನಾವಣಾ ಕಣಕ್ಕೆ ಇಳಿಯುವಂತೆ ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ. ಬಿಜೆಪಿ ಮತ್ತು ಹಿಂದುತ್ವ ಬೆಂಬಲಿಸುವ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು. ಇದೇ ವೇಳೆ, ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಸೇರಿದಂತೆ ಇತರ ಹಿಂದೂಪರ ಸಂಘಟನೆಗಳ ನಾಯಕರಿಂದಲೂ ತೀವ್ರ ಆಕ್ರೋಶ ವ್ಯಕ್ತಪವಾಗಿದೆ.
ಕಾಂಗ್ರೆಸ್ನವರು ಮತ ಕೇಳಲು ಬಂದ್ರೆ ನಾಯಿ ಬಿಡ್ತೀವಿ!
ಚಿಕ್ಕಮಗಳೂರು: ‘ಇದು, ಭಜರಂಗದಳದವರ ಮನೆ, ಕಾಂಗ್ರೆಸ್ಸಿನವರು ಮತಯಾಚಿಸಲು ಅವಕಾಶ ಇಲ್ಲ, ಒಳಗೆ ಬಂದರೆ ನಾಯಿ ಬಿಡಲಾಗುವುದು ಎಚ್ಚರ!’- ಭಜರಂಗದಳ ನಿಷೇಧ ಮಾಡುವ ಕುರಿತು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವ ಕಾಂಗ್ರೆಸ್ ನಿಲುವಿಗೆ ಆಕ್ರೋಶಗೊಂಡ ಭಜರಂಗದಳ ಕಾರ್ಯಕರ್ತನೊಬ್ಬ ತಮ್ಮ ಮನೆ ಮುಂದೆ ಬೋರ್ಡ್ ಹಾಕಿ ಕಾಂಗ್ರೆಸ್ಸಿಗರಿಗೆ ಎಚ್ಚರಿಕೆ ನೀಡಿದ್ದಾರೆ!
ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಹೋಬಳಿಯ ಗುಡ್ಡಟ್ಟಿಎಂಬ ಗ್ರಾಮದಲ್ಲಿ ಅರುಣ್ ಎಂಬ ಭಜರಂಗದಳದ ಕಾರ್ಯಕರ್ತನೇ ಹೀಗೆ ಎಚ್ಚರಿಕೆ ನೀಡಿರುವಾತ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಹಿಂದೂ ಸಂಘಟನೆ ಭಜರಂಗದಳ ನಿಷೇಧ ಮಾಡುತ್ತೇವೆ ಎಂದಿರುವ ಕೈ ಪ್ರಣಾಳಿಕೆ ವಿರುದ್ಧ ಹಿಂದೂ ಸಂಘಟನೆ ಕಾರ್ಯಕರ್ತರು ಈಗ ಕೆಂಡವಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ದತ್ತಪೀಠದ ಹೋರಾಟ ಆರಂಭಗೊಂಡ ಮೇಲೆ ಮಲೆನಾಡು ಭಾಗದಲ್ಲಿ ಈಗ ಹಿಂದೂ ಸಂಘಟನೆ ಮತ್ತಷ್ಟುಗಟ್ಟಿಯಾಗಿದ್ದು, ಇದೀಗ ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.