
ಕೊಪ್ಪಳ: ತಾಲ್ಲೂಕಿನ ಅಳವಂಡಿ ಭಾಗಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಸಿಂಗಟಾಲೂರು ಏತ ನೀರಾವರಿ ಯೋಜನೆಯನ್ನು ವಿಧಾನಸಭಾ ಚುನಾವಣೆ ಘೋಷಣೆಗೂ ಮೊದಲೇ ಕಾರ್ಯಾರಂಭ ಮಾಡಬೇಕು ಎಂದು ಸಿಂಗಟಾಲೂರು ಏತ ನೀರಾವರಿ ಯೋಜನೆ ಅನುಷ್ಠಾನ ಹೋರಾಟ ಸಮಿತಿ ಅಧ್ಯಕ್ಷ ಶರಣಪ್ಪ ಜಡಿ ಆಗ್ರಹಿಸಿದರು.
ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಯೋಜನೆಗೆ ಚಾಲನೆ ಲಭಿಸಿ ಮೂರು ದಶಕಗಳಾದರೂ ಇದುವರೆಗೂ ಹನಿ ನೀರು ಹರಿದಿಲ್ಲ. ಯೋಜನೆ ಬಲಭಾಗ ನೀರಾವರಿಯಾಗಿ ಒಂದು ದಶಕವೇ ಕಳೆದಿದೆ. 2016ರಲ್ಲಿ ಯೋಜನೆಯನ್ನು ಸೂಕ್ಷ್ಮ ನೀರಾವರಿಯಾಗಿ ಮಾಡಲಾಗಿದೆ. ಆದರೆ, ಕಾರ್ಯಾರಂಭ ಮಾಡಿಲ್ಲ. ಯೋಜನೆ ತ್ವರಿತ ಜಾರಿಗೆ ಆಗ್ರಹಿಸಿ ಫೆ. 14ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಳಿ ನಿಯೋಗ ತೆರಳಿ ಒತ್ತಡ ಹೇರಲಾಗುವುದು’ ಎಂದು ತಿಳಿಸಿದರು.
‘ಕಲ್ಲಳ್ಳಿ ಆಂಜನೇಯ ಏತ ನೀರಾವರಿ ಯೋಜನೆ ಆರಂಭಿಸುವಂತೆ ಮನವಿ ಸಲ್ಲಿಸಲಾಗಿದ್ದು, ಅದನ್ನು ಆರಂಭಿಸುವಂತೆ ಹಲವು ಬಾರಿ ಒತ್ತಾಯ ಮಾಡಲಾಗಿದೆ. ಅಧಿಕಾರಿಗಳು ಯೋಜನೆ ಸರ್ವೇ ನಡೆಸಲು ಅನುದಾನ ಕೋರಿ ಸಣ್ಣ ನೀರಾವರಿ ಇಲಾಖೆಗೆ ಪತ್ರ ಬರೆದಿದ್ದಾರೆ. ಸರ್ಕಾರ ಅನುದಾನ ಒದಗಿಸಿ ಕಾಮಗಾರಿ ತ್ವರಿತವಾಗಿ ಕಾಮಗಾರಿ ಆರಂಭವಾಗಲು ನೆರವಾಗಬೇಕು’ ಎಂದು ಒತ್ತಾಯಿಸಿದ್ದಾರೆ.
‘ಸಿಂಗಟಾಲೂರು ಏತ ನೀರಾವರಿ ಯೋಜನೆಯನ್ನು ಮಧ್ಯಪ್ರದೇಶ ಮಾದರಿಯಲ್ಲಿ ಅಭಿವೃದ್ಧಿ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ಹೇಳಿದೆ. ಯಾವ ಮಾದರಿಯಾದರೂ ಯೋಜನೆ ಅನುಷ್ಠಾನಗೊಳ್ಳಲಿ. ಒಟ್ಟಿನಲ್ಲಿ ರೈತರ ಹೊಲಗಳಿಗೆ ನೀರು ಹರಿಯಬೇಕು. ಕಲ್ಲಳ್ಳಿ ಏತ ನೀರಾವರಿ ಯೋಜನೆಯಡಿ ಹತ್ತು ಗ್ರಾಮಗಳು ಒಳಪಡಲಿದ್ದು, ಅಂದಾಜು ಐದು ಸಾವಿರ ಎಕರೆ ನೀರಾವರಿ ವ್ಯಾಪ್ತಿಗೆ ಒಳಪಡಲಿದೆ.’ ಎಂದರು.
ಗ್ರಾಮಸ್ಥರಾದ ನಾಗಪ್ಪ ಸವಡಿ, ಚಿಕ್ಕವೀರಪ್ಪ ಕವಡಿಮಟ್ಟಿ, ಜಗನ್ನಾಥರಡ್ಡಿ ದಾಸರಡ್ಡಿ, ಸಿದ್ಧಣ್ಣ ಕೋರಿಶೆಟ್ಟರ್, ದೇವಪ್ಪ ಕಟ್ಟಿಮನಿ ಇದ್ದರು.