

ಕೊಪ್ಪಳ: ನೆಲಮೂಲ ತಳಸಮುದಾಯದ ನಾನಾ ಕಲೆಗಳ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭವು ನಗರದ ಸಾಹಿತ್ಯ ಭವನದಲ್ಲಿ ಫೆ.10ರಂದು ವೈವಿದ್ಯ ಪೂರ್ಣವಾಗಿ ನಡೆಯಿತು.
ಸಾಹಿತ್ಯ ಭವನದ ಅಂಗಳದಲ್ಲಿ ಚೌಡಕಿ ಪದಗಳ ಗಾಯನ, ಹಲಗೆ ವಾದನದ ನಿನಾದ, ಸೋಬಾನೆ ಪದ, ಕೋಲಾಟ ಕಳೆ ಮನಸೂರೆಗೊಂಡಿತು.
ಮೂಲ ಸಂಸ್ಕೃತಿ-ಕನ್ನಡ ಸಂಸ್ಕೃತಿ ಶೀರ್ಷಿಕೆಯಡಿ ಜಿಲ್ಲಾಡಳಿತ ಕೊಪ್ಪಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ ನಶಿಸಿ ಹೋಗುತ್ತಿರುವ ತಳ ಸಮುದಾಯಗಳ ವಿಶಿಷ್ಟ ಕಲೆಗಳ ತರಬೇತಿ ಶಿಬಿರವನ್ನು ಸೋಬಾನೆ ಪದದ ಕಲಾವಿದರಿಂದ ಉದ್ಘಾಟಿಸಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕೊಪ್ಪಳ ಜಿಲ್ಲೆಯ ಲೇಖಕರು, ರಂಗಕರ್ಮಿ ಹಾಗೂ ಜಿಲ್ಲಾ ಕೇಂದ್ರ ಗ್ರಂಥಾಲಯದ ಗ್ರಂಥಾಲಯ ಸಹಾಯಕರಾದ ನಾಗರಾಜ ನಾಯಕ ಡೊಳ್ಳಿನ ಅವರು ಕುಮಾರರಾಮನ ಮತ್ತು ಸುರಪುರ ಸಂಸ್ಥಾನದ ಮೂಲ ಜನಪದದ ಹಾಡುಗಳನ್ನು ಹೇಳಿ ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು. ಬಳಿಕ ಮಾತನಾಡಿದ ಅವರು, ಮೂಲ ಜನಪದದಿಂದ ಸಂಶೋಧಕರಿಗೆ ದಾರಿಯಾಗಲಿದೆ. ಈಗಲೂ ಸಹ ಅನಕ್ಷರಸ್ಥರಿಗೆ ಜನಪದವೇ ಪ್ರಮುಖ ಸಂವಹನ ಮಾಧ್ಯಮವಾಗಿದೆ. ಅಂತಹ ಮಹತ್ವದ ಮೂಲ ಕಲೆಗಳ ಉತ್ತೇಜನಕ್ಕೆ ವೇದಿಕೆ ಕಲ್ಪಿಸಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.


ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೊಟ್ರೇಶ ಮರಬನಳ್ಳಿ ಅವರು ಪ್ರಾಸ್ತಾವಿಕ ಮಾತನಾಡಿ, ಹೈದ್ರಾಬಾದ್ ಕರ್ನಾಟಕ ಪ್ರದೇಶವು ಆರ್ಥಿಕವಾಗಿ ಹಿಂದುಳಿದಿರಬಹುದು, ಆದರೆ ಸಾಂಸ್ಕೃತಿಕವಾಗಿ ಶ್ರೀಮಂತವಾದ ನೆಲ ಇದಾಗಿದೆ. ಉತ್ತರ ಕರ್ನಾಟಕದ ಕೊಪ್ಪಳ, ಬಳ್ಳಾರಿ, ಕಲಬುರಗಿ, ರಾಯಚೂರು, ಯಾದಗಿರಿ, ಬೀದರ ಭಾಗದಲ್ಲಿ ಸಹ ಅನೇಕ ಪ್ರತಿಭಾನ್ವಿತ ಕಲಾವಿದರಿದ್ದು ಅವರನ್ನು ಗುರುತಿಸುವ ಕಾರ್ಯವನ್ನು ಇಂತಹ ವಿಭಿನ್ನ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿಯು ಇಲಾಖೆಯು ನಿರಂತರವಾಗಿ ಮಾಡುತ್ತ ಬರುತ್ತಿದೆ ಎಂದು ತಿಳಿಸಿದರು. ಹೊಸ ಪೀಳಿಗೆಯ ಕಲಾವಿದರಿಗೆ ತಳ ಸಮುದಾಯಗಳ ಕಲೆಗಳ ಬಗ್ಗೆ ತಿಳಿದಕೊಳ್ಳಲು ಇದೊಂದು ಸುವರ್ಣವಕಾಶವಾಗಿದೆ ಎಂದರು.
ತರಬೇತಿ ಶಿಬಿರದ ಜಿಲ್ಲಾ ಸಂಚಾಲಕರಾದ ಮಹಾಲಕ್ಷ್ಮೀ ಕಂದಾರಿ ಅವರು ಮಾತನಾಡಿ, ನಮ್ಮ ಮೂಲ ಕಲೆಗಳ ಕಲಾವಿದರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಬೇಕು. ಮೂಲ ಕಲೆಗಳ ಬಗ್ಗೆ ಪಠ್ಯಕ್ರಮದ ಮೂಲಕ ಪರಿಚಯಿಸಿದಾಗ ಶಾಲಾ ಕಾಲೇಜು ಮಕ್ಕಳಿಗೆ ಈ ವಿಷಯ ತಲುಪಿ ಕಲೆಗಳ ಉಳಿವು ಸಾಧ್ಯವಾಗಲಿದೆ ಎಂದು ತಿಳಿಸಿದರು. ಫೇಸಬುಕ್, ಟ್ವೀಟರ್, ಇನಸ್ಟಾಗ್ರಾಂನಂತಹ ಸಾಮಾಜಿಕ ಜಾಲತಾಣಗಳಲ್ಲಿ ಸಹ ನಮ್ಮ ಕಲೆ, ಕಲಾವಿದರು ಮತ್ತು ವಾದ್ಯಗಳ ವಿಶಿಷ್ಟತೆಯನ್ನು ಹರಿಯಬಿಟ್ಟಲ್ಲಿ ಅದು ಹೆಚ್ಚಿನ ಪ್ರಮಾಣದಲ್ಲಿ ಜನಮನಸು ತಲುಪಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ತರಬೇತಿ ಶಿಬಿರದ ಮತ್ತೊಬ್ಬ ಜಿಲ್ಲಾ ಸಂಚಾಲಕರಾದ ಮಂಜುನಾಥ ಮಾಲಗತ್ತಿ ಅವರು ಮಾತನಾಡಿ, ಕಲಾವಿದರು ಪ್ರಚಾರ ಮತ್ತು ಪರಸ್ಕಾರದ ಗೀಳಿಗೆ ಬೀಳಬಾರದು ಎಂದು ತಿಳಿಸಿದರು. ಕನ್ನಡ ಮತ್ತು ಸಂಸ್ಕೃತಿಯು ಮನುಷ್ಯ ಜೀವನದ ಕಲೆಯಾಗಿದ್ದು, ಕಲಾವಿದರನ್ನು ಗುರುತಿಸಿ ಮೂಲ ಕಲೆಗಳ ಅನಾವರಣಕ್ಕೆ ಅವಕಾಶ ಮಾಡಿಕೊಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಲೇಖಕಿ, ಪತ್ರಕರ್ತೆ ಸಾವಿತ್ರಿ ಮುಜುಮದಾರ, ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಕಲಾವಿದರಾದ ಕಳಕಪ್ಪ ತೊಂಡಿಹಾಳ ಹಾಗೂ ಇತರರು ಇದ್ದರು.
ಸಮಾರಂಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕುಷ್ಟಗಿ ತಾಲೂಕಿನ ಶರಣಪ್ಪ ತಿಮ್ಮಣ್ಣ ಒಡಗೇರಿ ಅವರು ಲಾವಣಿ ಪದ ಹಾಡಿದರು. ತೆಗ್ಗಿಹಾಳದ ಬಸಪ್ಪ ಭರಮಪ್ಪ ಚೌಡ್ಕಿ ಅವರು ಚೌಡ್ಕಿ ಪದಗಳನ್ನು ಹೇಳಿದರು. ನಿಲೋಗಲ್ಲ ಗ್ರಾಮದ ಹನುಮವ್ವ ಗೌಡರ, ಅಕ್ಕಮಹಾದೇವಿ ತಳವಾರ, ಬಸಮ್ಮ ಕಟ್ಟಿ, ಗಂಗವ್ವ ವಕ್ಕನದುರಗ, ನೀಲವ್ವ ಕಟ್ಟಿ ಹಾಗೂ ತಂಡದವರು ಸೋಬಾನೆ ಪದ ಹೇಳಿದರು. ಮುಧೋಳದ ಅಂಬಣ್ಣ ಯಲ್ಲಪ್ಪ ವಡ್ಡರ ಅವರು ಕೋಲಾಟ ಪ್ರದರ್ಶನ ಮಾಡಿದರು. ಸಂಕನೂರದ ನೀಲಪ್ಪ ಸಿದ್ದಪ್ಪ ಹರಿಜನ ಅವರು ಕಣಿ ಹಲಗಿ ವಾದನ ನಡೆಸಿದರು. ಗೀತಾ ಹಂಚಿ ಕಾರ್ಯಕ್ರಮ ನಡೆಸಿಕೊಟ್ಟರು.