ಕಾರಟಗಿ (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ಬುದಗುಂಪಾ ಗ್ರಾಮದ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನದ ಮೀಸಲಾತಿ ಪ್ರಶ್ನಿಸಿ ಹೈಕೋರ್ಟ್‌ನಿಂದ ತಡೆಯಾಜ್ಜೆ ತಂದ ವಿಚಾರಕ್ಕಾಗಿ ಗ್ರಾಮದಲ್ಲಿ ಶನಿವಾರ ತಡರಾತ್ರಿ ನಡೆದ ಗಲಾಟೆಯ ವೇಳೆ ಪೊಲೀಸ್‌ ಮೇಲೆ ಹಲ್ಲೆಯಾಗಿದೆ.

ಕಾರಟಗಿ ಪೊಲೀಸ್‌ ಠಾಣೆಯ ಹೆಡ್‌ ಕಾನ್‌ಸ್ಟೆಬಲ್‌ ತಾರಾ ಸಿಂಗ್‌ ಮೇಲೆ ಹಲ್ಲೆಯಾಗಿದ್ದು, ಈ ಕುರಿತು ಪ್ರತ್ಯೇಕ ಎಫ್‌ಐಆರ್‌ ದಾಖಲಾಗಿದೆ.

ಘಟನೆಗೆ ಸಂಬಂಧಿಸಿ ದಾಖಲಾದ ಎರಡನೇ ಎಫ್‌ಐಆರ್‌ ಇದು. ಪೊಲೀಸರೇ ಸ್ವಯಂಪ್ರೇರಿತರಾಗಿ ಮೊದಲು 30 ಜನರ ವಿರುದ್ಧ ಒಂದು ಎಫ್‌ಐಆರ್‌ ದಾಖಲಿಸಿಕೊಂಡಿದ್ದರು.ಈಗ ಮತ್ತೊಂದು ಪ್ರಕರಣ ದಾಖಲಾಗಿದೆ.

‘ಬುದಗುಂಪಾದ ಬಸವೇಶ್ವರ ಸರ್ಕಲ್‌ ಹತ್ತಿರ ಗಲಾಟೆ ನಡೆಯುತ್ತಿದ್ದಾಗ ಮಹಿಬೂಬ ಅಲಿಯಾಸ್‌ ಬೆಂಕಿ ಎಂಬಾತ ನನ್ನನ್ನು ಅಂಗಿಯ ಕಾಲರ್‌ ಹಿಡಿದು ತಳ್ಳಾಡಿ ಹಲ್ಲೆ ಮಾಡಿದ್ದಾನೆ. ಈ ಮೂಲಕ ಪೊಲೀಸ್‌ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ. ಜೊತೆಗಿದ್ದ ಸಿಬ್ಬಂದಿ ಮತ್ತಷ್ಟು ಹಲ್ಲೆಯಿಂದ ಪಾರು ಮಾಡಿದರು’ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

error: Content is protected !!