ಗಂಗಾವತಿ (ಏ.23) : ಕೇವಲ ನನ್ನ ಮೇಲೆ ಪ್ರಕರಣ ದಾಖಲಾಗಿಲ್ಲ, ಅದರಂತೆ ಕಾಂಗ್ರೆಸ್‌ ನಾಯಕರಾದ ಸೋನಿಯಾಗಾಂಧಿ, ರಾಹುಲ್‌ ಗಾಂಧಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರ ಮೇಲೆಯೂ ಪ್ರಕರಣಗಳಿವೆ ಎಂದು ಕೆಆರ್‌ಪಿಪಿ ಅಭ್ಯರ್ಥಿ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

ನಗರದ ಇದ್ಗಾ ಮೈದಾನದಲ್ಲಿ ರಂಜಾನ್‌ ನಿಮಿತ್ತ ಸಾಮೂಹಿಕ ಪ್ರಾರ್ಥನೆಯ ನಂತರ ಮಾತನಾಡಿದ ಅವರು, ಕೆಲವರು ನಾನು ಜೈಲಿಗೆ ಹೋಗಿರುವುದನ್ನು ಪದೇ ಪದೇ ಪ್ರಸ್ತಾಪಿಸುತ್ತಾರೆ. ಅವರಿಗೆ ಕಾಂಗ್ರೆಸ್‌ ನಾಯಕರುಗಳು ಜೈಲು, ಪ್ರಕರಣ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ದಾಖಲಾಗಿರುವುದು ಗೊತ್ತಿಲ್ಲವೆ ಎಂದು ಪ್ರಶ್ನಿಸಿದರು.

ಒಂದು ಬೆರಳು ಬೇರೆಯವರಿಗೆ ತೋರಿಸುವ ಮೊದಲು ನಾಲ್ಕು ಬೆರಳು ನಮ್ಮ ಕಡೆ ನೋಡುತ್ತವೆ ಎಂದು ಕಾಂಗ್ರೆಸ್‌ನವರು ಅರಿತುಕೊಳ್ಳಬೇಕು ಎಂದರು.

ಜನಾರ್ದನ ರೆಡ್ಡಿ ಜನರ ಕೈಗೆ ಸಿಗಲ್ಲ ಎನ್ನುವ ಆರೋಪಕ್ಕೆ ನಾನು ರಾಜಕೀಯಕ್ಕಿಂತ ಅಭಿವೃದ್ಧಿಗೆ ಒತ್ತು ನೀಡುವುದಕ್ಕಾಗಿ ಗಂಗಾವತಿ ನಗರಕ್ಕೆ ಬಂದಿದ್ದೇನೆ.ಈ ಕ್ಷೇತ್ರದ ಜನರು ಬದಲಾವಣೆ ಬಯಸಿದ್ದಾರೆ. ಈ ಕಾರಣಕ್ಕಾಗಿ ಅಭಿಮಾನಿಗಳು ಸಾಗರೋಪಾದಿಯಲ್ಲಿ ನನ್ನ ಬಳಿ ಬರುತ್ತಿದ್ದಾರೆ.ನನ್ನನ್ನು ಜನರು ಮನೆ ಮಗನಾಗಿ ಸ್ವೀಕರಿಸಿದ್ದು ನನ್ನ ಅದೃಷ್ಟಎಂದರು.

error: Content is protected !!