
ಹೋಸಪೇಟೆ (ವಿಜಯನಗರ): ಇಲ್ಲಿನ ಮಹಾತ್ಮ ಗಾಂಧಿ ವೃತ್ತ ಸಮೀಪದ ಪ್ರಭಾತ್ ಎಲೆಕ್ಟ್ರಾನಿಕ್ ಮಳಿಗೆ ಮೇಲೆ ಚುನಾವಣಾ ಅಧಿಕಾರಿಗಳು ಶನಿವಾರ ದಾಳಿ ನಡೆಸಿ ದಾಸ್ತಾನು ಪರಿಶೀಲಿಸಿದರು.
ಪ್ರಭಾತ್ ಮಳಿಗೆ ಟಿ.ವಿ., ರೆಫ್ರಿಜಿರೇಟರ್, ಏರ್ ಕೂಲರ್ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟಕ್ಕೆ ಹೆಸರಾಗಿದೆ.
ಆದರೆ, ಕಳೆದ ಕೆಲವು ದಿನಗಳಿಂದ ಮಳಿಗೆಯಲ್ಲಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ದಾಸ್ತಾನು ಮಾಡಲಾಗಿದೆ. ಈ ವಿಷಯ ಅರಿತು ಚುನಾವಣಾ ಅಧಿಕಾರಿಗಳು ಪೊಲೀಸರೊಂದಿಗೆ ದಾಳಿ ನಡೆಸಿ ಪರಿಶೀಲಿಸಿದರು.
‘ಈಗ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ. ಎಲೆಕ್ಟ್ರಾನಿಕ್ ವಸ್ತುಗಳನ್ನು ಮಾರಾಟಕ್ಕೆ ದಾಸ್ತಾನು ಮಾಡಲಾಗಿದೆಯೋ ಅಥವಾ ಅನ್ಯ ಉದ್ದೇಶಕ್ಕೆ ತರಿಸಲಾಗಿದೆಯೋ ಎನ್ನುವುದನ್ನು ಪರಿಶೀಲಿಸಲಾಗುತ್ತಿದೆ. ದಾಸ್ತಾನು ಮಾಡಿದ ಎಲ್ಲ ವಸ್ತುಗಳ ದಾಖಲೆಗಳನ್ನು ಪ್ರಸ್ತುತಪಡಿಸುವಂತೆ ಮಳಿಗೆ ಮಾಲೀಕರಿಗೆ ತಿಳಿಸಲಾಗಿದೆ. ತನಿಖೆ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.