ಹುಬ್ಬಳ್ಳಿ: ವರಿಷ್ಠರು ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ‌ ಪ್ರಧಾನ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮೂಲಕ ಹೊಸ ಸಂದೇಶ‌ ಕಳಿಸಿದ್ದಾರೆ. ಅವರ ಜತೆ ಚರ್ಚಿಸಿದ ನಂತರ ಇಂದು ರಾತ್ರಿಯೇ ನನ್ನ ಮುಂದಿನ ನಿರ್ಧಾರ ಪ್ರಕಟಿಸುತ್ತೇನೆ ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದರು.

ಶನಿವಾರ ಸಂಜೆ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾತ್ರಿ 8.30ರ ಸುಮಾರಿಗೆ ಈ ಮೂವರು ನನ್ನ ನಿವಾಸಕ್ಕೆ ಬಂದು ಮಾತುಕತೆ ನಡೆಸಲಿದ್ದಾರೆ ಎಂದರು.

ನನ್ನ ಬೆಂಬಲಿಗರ ಅಭಿಪ್ರಾಯ ಆಧರಿಸಿ‌ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವ ಹಂತದಲ್ಲಿದ್ದೇನೆ. ವರಿಷ್ಠರು ಯಾವ ಸಂದೇಶ ಕಳಿಸಿದ್ದಾರೆ ಎಂದು‌ ತಿಳಿದುಕೊಳ್ಳುತ್ತೇನೆ. ಆ ನಂತರ ನನ್ನ ಮುಂದಿನ ಹೆಜ್ಜೆ‌ ಇಡಲು ಅನುಕೂಲವಾಗುತ್ತದೆ ಎಂದು ಹೇಳಿದರು.

ನಮ್ಮ ಕುಟುಂಬದ ಸದಸ್ಯರೊಬ್ಬರಿಗೆ ಸ್ಪರ್ಧಿಸಲು ಅನುವು ಮಾಡಿಕೊಡುವ ಮಾತುಗಳು ಕೇಳಿಬರುತ್ತಿವೆ. ನಾನೇ ಸ್ಪರ್ಧೆ ಮಾಡುತ್ತೇನೆ.‌ ನಮ್ಮ ಕುಟುಂಬದಿಂದ ಯಾರೂ ಸ್ಪರ್ಧೆ ಮಾಡುವುದಿಲ್ಲ. ಇದನ್ನು ವರಿಷ್ಠರಿಗೆ ಸ್ಪಷ್ಟಪಡಿಸಿದ್ದೇನೆ ಎಂದರು.

ಟಿಕೆಟ್ ನೀಡಲು ವಿಳಂಬ ಮಾಡುತ್ತಿರುವುದು ಒಂದು ರೀತಿಯಲ್ಲಿ ಅವಮಾನ ಮಾಡಿದಂತೆ. ರಾಜಕೀಯ ವ್ಯವಸ್ಥೆಯಲ್ಲಿ ಚರ್ಚೆ, ಸಂವಾದಕ್ಕೆ ಇನ್ನೊಂದು ಅವಕಾಶ ನೀಡುತ್ತಿದ್ದೇನೆ ಎಂದು ಹೇಳಿದರು.

ನಾನು ಯಾವ ರೀತಿ ಸ್ಪರ್ಧೆ ಮಾಡಿದರೂ ಗೆಲ್ಲುತ್ತೇನೆ‌ ಎಂಬ ವಿಶ್ವಾಸ ಇದೆ.‌ ಜನರ ಪ್ರೀತಿ, ವಿಶ್ವಾಸ ಗಳಿಸಿದ್ದೇನೆ. ಕಟ್ಟಿ ಬೆಳೆಸಿದ ಪಕ್ಷದಿಂದ ಗೆದ್ದರೆ ಗೌರವ ಇರುತ್ತದೆ ಎಂಬುದು ನನ್ನ‌ಭಾವನೆ. ಯಾವ ಪಕ್ಷದವರೂ ನನ್ನನ್ನು ಸಂಪರ್ಕಿಸಿಲ್ಲ. ಆದರೆ, ರಾಜಕೀಯದಲ್ಲಿ ಬಾಗಿಲು ಮುಚ್ಚಿಕೊಂಡು ಇರಬಾರದು ಎಂದರು.

ನಾನು ಸ್ಪರ್ಧೆ ಮಾಡುವುದು ಖಚಿತ. ಏ.17 ಅಥವಾ 18ರಂದು ನಾಮಪತ್ರ ಸಲ್ಲಿಸಲು ಚಿಂತನೆ‌ ನಡೆಸಿದ್ದೇನೆ ಎಂದು ತಿಳಿಸಿದರು.

error: Content is protected !!