ಕೊಪ್ಪಳ: ವಿಶ್ವ ವಿದ್ಯಾಲಯಗಳ ಮಟ್ಟದಲ್ಲಿ ಸಮಾಜಮುಖಿಯಾದ ಸಂಶೋಧನೆಗಳನ್ನು ಕೈಗೊಂಡಲ್ಲಿ ಬಲಿಷ್ಠ ಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದು ಕೊಪ್ಪಳ ವಿಶ್ವವಿದ್ಯಾಲಯ ಕುಲಪತಿಗಳಾದ ಪ್ರೊ.ಬಿ.ಕೆ.ರವಿ ಅವರು ಹೇಳಿದರು.

ಕೊಪ್ಪಳ ಸೇರಿದಂತೆ ರಾಜ್ಯದ ನೂತನ 7 ವಿಶ್ವವಿದ್ಯಾಲಯಗಳ ಉದ್ಘಾಟನೆಯ ಹಿನ್ನೆಲೆಯಲ್ಲಿ ತಳಕಲ್‌ನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿರುವ ಕೊಪ್ಪಳ ಸ್ನಾತಕೋತ್ತರ ಕೇಂದ್ರದ ಸಭಾಂಗಣದಲ್ಲಿ ಸಿದ್ಧವಾಗಿದ್ದ ವೇದಿಕೆಯನ್ನು ದೀಪ ಬೆಳಗಿಸಿ ಅವರು ಮಾತನಾಡಿದರು.

ವಿಶ್ವವಿದ್ಯಾಲಯಗಳು ಹೊಸದಾಗಿ ಆರಂಭವಾದಾಗ ಪ್ರಾಥಮಿಕ ಹಂತದಲ್ಲಿ ಕೆಲವು ಸಮಸ್ಯೆಗಳು ಎದುರಾಗುವುದು ಸಹಜ. ಅದನ್ನು ಮೀರಿ ಕೆಲಸ ಮಾಡಿ ಶೈಕ್ಷಣಿಕ ಪ್ರಗತಿ ಸಾಧಿಸುವುದು ನಮ್ಮ ಮೊದಲ ಹೆಜ್ಜೆಯಾಗಬೇಕು. ವಿಶ್ವವಿದ್ಯಾಲಯದ ಆಡಳಿತ ಅಧಿಕಾರಿಗಳ ನೇಮಕ, ವಿದ್ಯಾರ್ಥಿಗಳ ಪ್ರವೇಶಾತಿ, ಕಾಲೇಜುಗಳ ಸಂಲಗ್ನತೆ, ಮೂಲ ಸೌಲಭ್ಯಗಳಿಗೆ ಮೊದಲ ಆದ್ಯತೆ ಕಲ್ಪಿಸುವುದು ನಮ್ಮ ಕಾರ್ಯಯೋಜನೆಯಾಗಿದೆ ಎಂದು ಅವರು ತಿಳಿಸಿದರು.

ಯುವಪೀಳಿಗೆಯ ಸಬಲೀಕರಣ, ವಿಶ್ವವಿದ್ಯಾಲಯದ ಜರುಗುವ ಎಲ್ಲಾ ಮಾದರಿಯ ಸಂಶೋಧನೆಗಳು ಸಮಾಜ ಸುಧಾರಣೆಗೆ ದಾರಿದೀಪವಾಗಲು ನಮ್ಮ ಪ್ರಯತ್ನ ಸದಾಕಾಲ ಮುಂದುವರೆಯಲಿದೆ ಎಂದು ಅವರು ತಿಳಿಸಿದರು.

ಸಮಾರಂಭದಲ್ಲಿ ಕೊಪ್ಪಳ ವ್ಯಾಪ್ತಿಯ ಪದವಿ ಕಾಲೇಜುಗಳ ಎಲ್ಲ ಪ್ರಾಂಶುಪಾಲರುಗಳು, ಕೊಪ್ಪಳ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಡಾ.ಮನೋಜ್ ಡೊಳ್ಳಿ, ಯಲಬುರ್ಗಾ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ. ಪ್ರಕಾಶ್ ಯಳವಟ್ಟಿ, ಅಧ್ಯಾಪಕ ವೃಂದ, ವಿದ್ಯಾರ್ಥಿಗಳು ಇದ್ದರು.

error: Content is protected !!