
ಯಲಬುರ್ಗಾ (ಕೊಪ್ಪಳ ಜಿಲ್ಲೆ): ಹಿಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಯಲಬುರ್ಗಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ವೀರನಗೌಡ ಪೊಲೀಸ್ ಪಾಟೀಲ್ ಬಳೂಟಗಿ ಶನಿವಾರ ಇಲ್ಲಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.
ಜೆಡಿಎಸ್ ಗೆ ಹೋಗುವ ಮೊದಲು ಬಳೂಟಗಿ ಕಾಂಗ್ರೆಸ್ ನಲ್ಲಿಯೇ ಇದ್ದರು. ಬಸವರಾಜ ರಾಯರಡ್ಡಿ ಅವರ ಜೊತೆಗಿನ ಭಿನ್ನಾಭಿಪ್ರಾಯದಿಂದಾಗಿ ಕಾಂಗ್ರೆಸ್ ತೊರೆದಿದ್ದರು. ಈಗ ಮರಳಿ ಪಕ್ಷಕ್ಕೆ ಬಂದರು.
ಕುರುಬ ಸಮಾಜಕ್ಕೆ ಸೇರಿದ ಬಳೂಟಗಿ 2018ರ ಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿ 14,401 ಮತಗಳನ್ನು ಪಡೆದಿದ್ದರು. ಹಾಲಿ ಶಾಸಕ ಹಾಲಪ್ಪ ಆಚಾರ್ ಎದುರು ರಾಯರಡ್ಡಿ 12, 222 ಮತಗಳಿಂದ ಪರಾಭವಗೊಂಡಿದ್ದರು. ಬಳೂಟಗಿ ಹಿಂದಿನ ಚುನಾವಣೆ ಸಮಯದಲ್ಲಿ ಜೆಡಿಎಸ್ ಸೇರಿದ್ದರಿಂದ ರಾಯರಡ್ಡಿಗೆ ಹಿನ್ನಡೆ ಉಂಟಾಗಿತ್ತು.
ಈ ಹಿನ್ನಲೆಯಲ್ಲಿ ಇತ್ತೀಚೆಗೆ ರಾಯರಡ್ಡಿ ಅವರು ಬಳೂಟಗಿ ಮನೆಗೆ ಪಕ್ಷಕ್ಕೆ ಮರಳಿ ಬರುವಂತೆ ಮನವಿ ಮಾಡಿದ್ದರು.
ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಸಿದ್ದರಾಮಯ್ಯ ಅವರು ಬಳೂಟಗಿ ಬೇರೆ ಬೇರೆ ಕಾರಣಕ್ಕೆ ಪಕ್ಷ ಬಿಟ್ಟು ಹೋಗಿದ್ದರು. ಈಗ ಮರಳಿ ಬಂದಿದ್ದು ಸಂತೋಷ ತಂದಿದೆ. ರಾಜ್ಯದೆಲ್ಲೆಡೆ ಕಾಂಗ್ರೆಸ್ ಪರ ಅಲೆಯಿದೆ ಎಂದರು.
ಮಾಜಿ ಶಾಸಕ ಬಸವರಾಜ ರಾಯರಡ್ಡಿ ಮಾತನಾಡಿ ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ನಾವೆಲ್ಲರೂ ಮುನ್ನಡೆಯಬೇಕಿದೆ. ಬಳೂಟಗಿ ಪಕ್ಷಕ್ಕೆ ವಾಪಸ್ ಬಂದಿದ್ದರಿಂದ ಶಕ್ತಿ ಹೆಚ್ಚಾಗಿದೆ ಎಂದರು.
ವೀರನಗೌಡ ಬಳೂಟಗಿ ಮಾತನಾಡಿ ರಾಜಕೀಯವಾಗಿ ವ್ಯತ್ಯಾಸವಿದ್ದರೂ ಸಿದ್ದರಾಮಯ್ಯ ಹಾಗೂ ರಾಯರಡ್ಡಿ ಅವರ ಜೊತೆ ವೈಯಕ್ತಿಕವಾಗಿ ಉತ್ತಮ ಬಾಂಧವ್ಯ ಹೊಂದಿದ್ದೇನೆ. ರಾಯರಡ್ಡಿ ಅವರನ್ನು ಮತ್ತೆ ಶಾಸಕರನ್ನಾಗಿ ಮಾಡಲು ನಾವೆಲ್ಲರೂ ಶ್ರಮಿಸೋಣ. ರಾಯರಡ್ಡಿ ಕೇವಲ ವ್ಯಕ್ತಿ ಅಲ್ಲ. ದೊಡ್ಡ ಶಕ್ತಿ ಎಂದರು.